ಭಾರತೀಯ ಜೀವವಿಮಾ ನಿಗಮವು (ಎಲ್ಐಸಿ) ಭಾರತದಲ್ಲಿನ ಅತ್ಯಂತ ದೊಡ್ಡ ಜೀವ ವಿಮೆ ಸೇವೆ ಒದಗಿಸುವ ಕಂಪನಿ, ಮತ್ತು ದೇಶದ ಅತಿ ದೊಡ್ಡ ಹೂಡಿಕೆದಾರವೂ ಆಗಿದೆ. ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಅಧೀನವಾಗಿದೆ. ಅದು ಭಾರತ ಸರ್ಕಾರದ ವೆಚ್ಚಗಳ ಪೈಕಿ ಸುಮಾರು ಶೇಕಡಾ ೨೪.೬ರಷ್ಟು ವೆಚ್ಚಗಳನ್ನು ಒದಗಿಸುತ್ತದೆ. ಅದು ೮ ಟ್ರಿಲಿಯನ್ ರೂಪಾಯಿಗಳಷ್ಟು ಬೆಲೆಯ ಸ್ವತ್ತನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ವು ಮುಂಬೈಯಲ್ಲಿ ಕೇಂದ್ರ ಕಾರ್ಯಾಲಯವುಳ್ಳ ಭಾರತೀಯ ಸರ್ಕಾರಿ ಸ್ವಾಮ್ಯದ ವಿಮೆ ಗುಂಪು ಮತ್ತು ಬಂಡವಾಳ ಕಂಪನಿಯಾಗಿದೆ. ಇದು ರೂ. 1.560.482 ಕೋಟಿ ಅಂದಾಜು ಆಸ್ತಿ ಮೌಲ್ಯ (ಅಮೇರಿಕಾದ $ 230 ಶತಕೋಟಿ)ವುಳ್ಳ ಭಾರತದಲ್ಲಿ ದೊಡ್ಡ ವಿಮಾ ಸಂಸ್ಥೆ. 2013 ರಲ್ಲಿ ರೂ..1433103.14 ಒಟ್ಟು ಜೀವನ ನಿಧಿ ಹೊಂದಿತ್ತು ಒಟ್ಟು ಪಾಲಿಸಿ ಮೌಲ್ಯ ರೂ. 367,82 ಲಕ್ಷ ಆ ವರ್ಷದ ಮಾರಾಟ ಕೋಟಿ. ಭಾರತದ ಸಂಸತ್ತು 1956 ರಲ್ಲಿ ಭಾರತದ ಜೀವ ವಿಮಾ ಆಕ್ಟ್ ನ್ನು ಅಂಗಿಕರಿಸಿ ಖಾಸಗಿ ವಿಮಾ ಉದ್ಯಮವನ್ನು ರಾಷ್ಟ್ರೀಕೃತಗೊಳಿಸಿತು. ಭಾರತದಲ್ಲಿ ಹೋದಾಗ ಭಾರತೀಯ ಜೀವ ವಿಮಾ ನಿಗಮ ಸ್ಥಾಪಿಸಲಾಯಿತು. 245 ಕ್ಕೂ ಹೆಚ್ಚು ವಿಮಾ ಕಂಪನಿಗಳು ಮತ್ತು ಪ್ರಾವಿಡೆಂಟ್ ಸಂಘಗಳನ್ನು ರಾಷ್ಟ್ರ ಸ್ವಾಮ್ಯದ ಜೀವ ವಿಮಾ ನಿಗಮ ರಚಿಸಲು ವಿಲೀನಗೊಳಿಸಲಾಯಿತುಯ. ಈ ನಿಗಮದಲ್ಲಿ ೨೦೧೪ ‍ಫೆಬ್ರವರಿ ೨೪ ಕ್ಕೆ ೧೯.೪ ಲಕ್ಷ ಕೋಟಿ ಯಷ್ಟು ಬಂಡವಾಳ/ಸಂಗ್ರಹ ಇದೆ ಎಂದು ಮಂಡಳಿಯ ಕಾಯ‍ದರ್ಶಿ (ಮಾಣಿಕ್ಯಂ. ವಿ.) ಹೇಳಿದ್ದಾರೆ.(ಪ್ರಜಾವಾಣಿ೨೪-೨-೨೦೧೪) == ವಜ್ರ ಮಹೋತ್ಸವ (60ವರ್ಷ) == ಬಾರತದ ಮೇರು ಆರ್ಥಿಕ ಸಂಸ್ಥೆ ಭಾರತೀಯ ಜೀವವಿಮಾ ನಿಗಮಕ್ಕೆ (ಎಲ್‌ಐಸಿ) ೨೦೧೬ ವಜ್ರ ಮಹೋತ್ಸವದ ವರ್ಷ. ಅದು ಈಗ ಅರವತ್ತು ವರ್ಷಗಳನ್ನು ಪೂರೈಸಿ 61ನೆಯ ವರ್ಷಕ್ಕೆ ಕಾಲಿಡುತ್ತಿದೆ. ಈ 6 ದಶಕಗಳಲ್ಲಿ ಅದು ದೇಶದ ಜನತೆಗೆ ವಿಮೆಯ ಭದ್ರತೆಯೊದಗಿಸುತ್ತಲೇ ದೇಶ ನಿರ್ಮಾಣಕ್ಕೆ ನೀಡಿರುವ ಕೊಡುಗೆ ಅದ್ವಿತೀಯವಾಗಿದೆ. == ಇತಿಹಾಸ == 1956 ರಲ್ಲಿ ರಾಷ್ಟ್ರೀಕರಣ 1955 ರಲ್ಲಿ, ಸಂಸದ ಅಮೋಲ್ ಬಾರತೆ ಖಾಸಗಿ ವಿಮಾ ಸಂಸ್ಥೆಗಳ ಮಾಲೀಕರು ವಿಮೆ ವಂಚನೆ ಮಾಡುತ್ತರುವ ವಿಷಯವನ್ನು ಚರ್ಚೆಗೆ ಎತ್ತಿದರು. ಇದರಿಂದ ಆದ ನಂತರದ ತನಿಖೆಯಲ್ಲಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಾದ, ರಾಮಕೃಷ್ಣ ದಾಲ್ಮಿಯ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮಾಲೀಕ, ಇವರನ್ನು, ವಂಚನೆಗಾಗಿ ಎರಡು ವರ್ಷಗಳ ಕಾಲ ಸೆರೆಮನೆಗೆ ಕಳುಹಿಸಲಾಗಿತು. ಅಂದಿನ ವಿತ್ತ ಸಚಿವರಾದ ಸಿ.ಡಿ. ದೇಶಮುಖ್‌ ಅವರು ಜೀವ ವಿಮಾ ವ್ಯವಹಾರ ರಾಷ್ಟ್ರೀಕರಣ ಮಸೂದೆಯನ್ನು ಮಂಡಿಸಿದ್ದರು. ‘ಜೀವವಿಮೆಯ ರಾಷ್ಟ್ರೀಕರಣವು ಸಾರ್ವಜನಿಕರ ಹಿತರಕ್ಷಣೆಗಾಗಿ ಅಗತ್ಯವಾಗಿದೆ. ಅದೊಂದು ಸಾಮಾಜಿಕ ಸೇವೆಯಾಗಿದೆ. ಕಲ್ಯಾಣ ರಾಜ್ಯದ () ಆಶಯಗಳಿಗೆ ಅನುಸಾರವಾಗಿದೆ. ರಾಷ್ಟ್ರ ನಿರ್ಮಾಣ ಯೋಜನೆಗಳಿಗೆ ಅಗತ್ಯ ಬಂಡವಾಳ ಒದಗಿಸಲು ಅನಿವಾರ್ಯವಾಗಿದೆ. ವಿಮಾದಾರರ ಹಿತರಕ್ಷಣೆ ಮತ್ತು ದೇಶ ನಿರ್ಮಾಣಕ್ಕಾಗಿ ಬಂಡವಾಳ ಕ್ರೋಡೀಕರಿಸಲು ರಾಷ್ಟ್ರೀಕರಣವು ಅಗತ್ಯವಾಗಿದೆ’ ಎಂದಿದ್ದರು. ಜೂನ್ 19, 1956 ರಂದು ಭಾರತದ ಸಂಸತ್ತು ಭಾರತೀಯ ಜೀವ ವಿಮಾ ನಿಗಮ ರಚಿಸುವ ಭಾರತದ ಆಕ್ಟ್‍ಗೆ ಒಪ್ಪಿಗೆ ಕೊಟ್ಟಿತು. ಅದೇ ವರ್ಷ ಸೆಪ್ಟೆಂಬರ್‍ನಲ್ಲಿ ನಿಗಮ ಕಾರ್ಯ ಆರಂಭಮಾಡಿತು. ಇದು 245 ಖಾಸಗಿ ಜೀವ ವಿಮೆಗಾರರ ವ್ಯವಹಾರವನ್ನು ಮತ್ತು ಇತರ ಜೀವ ವಿಮಾ ಸೇವೆಗಳನ್ನು ನೀಡುತ್ತಿರುವ ಘಟಕಗಳನ್ನು ಒಟ್ಟು ಗೂಡಿಸಿತು. ಇದರಲ್ಲಿ 154 ಜೀವವಿಮಾ ಸಂಸ್ಥೆಗಳು, 16 ವಿದೇಶಿ ಕಂಪನಿಗಳು, 75 ಪ್ರಾವಿಡೆಂಟ್ ಕಂಪನಿಗಳನ್ನು ಒಳಗೊಂಡಿತ್ತು. ಭಾರತದಲ್ಲಿ ಜೀವ ವಿಮೆಯ ವ್ಯವಹಾರದ ರಾಷ್ಟ್ರೀಕರಣವು ಜೀವ ವಿಮೆ ಸೇರಿದಂತೆ, ಕನಿಷ್ಟ 17 ಆರ್ಥಿಕ ಕ್ಷೇತ್ರಗಳಲ್ಲಿ ರಾಜ್ಯದ ನಿಯಂತ್ರಣವನ್ನು ವಿಸ್ತರಿಸುವ ನೀತಿಯಾಗಿತ್ತು. ಇದು 1956 ರ ಕೈಗಾರಿಕಾ ನೀತಿಯ ನಿರ್ಣಯದ (ರೆಸಲ್ಯೂಷನ್) ಒಂದು ಪರಿಣಾಮವಾಗಿತ್ತು. ಭಾರತದ ಆರ್ಥಿಕ ಸ್ಥಿತಿ, ವಿಶ್ವದ ಆರ್ಥಿಕ ಕುಸಿತಗಳಲ್ಲೂ ಸ್ಥಿರವಾಗಿದ್ದುದಕ್ಕೆ ಮುಖ್ಯ ಕಾಣವಾಗಿದೆ. == ಬೆಳವಣಿಗೆ == ಹೀಗೆ ಬಂಡವಾಳ ಕ್ರೋಡೀಕರಣ ಮತ್ತು ವಿಮೆ ಸುರಕ್ಷೆಯ ಉದ್ದೇಶದೊಂದಿಗೆ 1956ರ ಸೆಪ್ಟೆಂಬರ್ 1 ರಂದು ಭಾರತೀಯ ಜೀವವಿಮಾ ನಿಗಮ ಉದಯವಾಯಿತು.ಅಂದಿನಿಂದ ಇಂದಿನವರೆಗೆ ಈ ಸರ್ಕಾರಿ ವಲಯದ ವಿಮಾ ಸಂಸ್ಥೆ ನಿರ್ಮಿಸಿರುವ ದಾಖಲೆಗಳು ವಿಸ್ಮಯಕಾರಿಯಾಗಿವೆ. ಆರಂಭದಲ್ಲಿ ಸಂಸ್ಥೆ ಹೊಂದಿದ್ದ ಪಾಲಿಸಿದಾರರ ಸಂಖ್ಯೆ 54.17 ಲಕ್ಷ. 60 ವರ್ಷಗಳ ನಂತರ 2016ರ ಮಾರ್ಚ್‌ ಅಂತ್ಯಕ್ಕೆ ಅದು ಹೊಂದಿರುವ ಒಟ್ಟು ಪಾಲಿಸಿದಾರರ ಸಂಖ್ಯೆ 30 ಕೋಟಿ. ವೈಯಕ್ತಿಕ ವಿಮೆಯಲ್ಲದೆ ಗುಂಪು ವಿಮೆಯ ಮೂಲಕ ವಿಮಾ ಸೌಲಭ್ಯ ಪಡೆದಿರುವ ಪಾಲಿಸಿದಾರರ ಸಂಖ್ಯೆ 12 ಕೋಟಿ. ಎರಡೂ ಒಂದಾಗಿ ಇರುವ ಒಟ್ಟು ಪಾಲಿಸಿದಾರರು 42 ಕೋಟಿ. ದೇಶದ ಜನ ಸಂಖ್ಯೆಯ ಶೇಕಡ 32ರಷ್ಟು ! ಕಾರ್ಯಾರಂಭ ಮಾಡಿದಾಗ ಎಲ್ಐಸಿ ಸಂಗ್ರಹಿಸಿದ ಪ್ರೀಮಿಯಂನ ಮೊತ್ತ ರೂ.81.7 ಕೋಟಿಗಳು. 2016ರ ಮಾರ್ಚ್‌ ತಿಂಗಳ ಅಂತ್ಯಕ್ಕೆ ಸಂಗ್ರಹಿಸಿದ ಪ್ರೀಮಿಯಂನ ಮೊತ್ತ ರೂ.2,66,225 ಕೋಟಿಗಳು. ಅಂದು ರೂ.378 ಕೋಟಿಗಳ ಜೀವನಿಧಿ ಹೊಂದಿದ್ದರೆ ಇಂದು ಜೀವನಿಧಿಯ ಮೊತ್ತ ರೂ.20.57 ಲಕ್ಷ ಕೋಟಿ. 1951ರಲ್ಲಿ ಎಲ್ಐಸಿ ಹೊಂದಿದ್ದ ಆಸ್ತಿಯ ಮೊತ್ತ ₹ 348 ಕೋಟಿಗಳು. ಇಂದು 2016ರಲ್ಲಿ ಹೊಂದಿರುವ ಆಸ್ತಿಯ ಮೊತ್ತ ರೂ.22.1 ಲಕ್ಷ ಕೋಟಿಗಳು. == ದಕ್ಷತೆ ಮತ್ತು ಸಾಮರ್ಥ್ಯ == ಪಾಲಿಸಿದಾರರ ಸೇವೆಯಲ್ಲಿ ಎಲ್ಐಸಿ ಅತ್ಯುತ್ಕೃಷ್ಟ ಮಟ್ಟ ತಲುಪಿದೆ. ಜನತೆಯ ವಿಶ್ವಾಸದ ಪ್ರತೀಕವಾದ ಅದು ದಾವೆ ಇತ್ಯರ್ಥದ ( ) ವಿಚಾರದಲ್ಲಿ ವಿಶ್ವ ದಾಖಲೆ ಹೊಂದಿದೆ. ಅವಧಿ ಪೂರ್ಣಗೊಂಡ ನಂತರ ಮತ್ತು ಸಾವಿನ ನಂತರದ ಎರಡೂ ದಾವೆ ಇತ್ಯರ್ಥದಲ್ಲಿ ಎಲ್ಐಸಿಯು ಶೇಕಡ 99ಕ್ಕೂ ಹೆಚ್ಚಿನ ಇತ್ಯರ್ಥ ದರ ಹೊಂದಿದೆ. ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಇತ್ಯರ್ಥ ಮಾಡಿದ ಒಟ್ಟು ದಾವೆಗಳ ಸಂಖ್ಯೆ 215.17 ಲಕ್ಷ. ಇತ್ಯರ್ಥ ಮಾಡಿದ ದಾವೆಯ ಮೊತ್ತ ರೂ.1.01 ಲಕ್ಷ ಕೋಟಿಗಳು. == ಜನಕಲ್ಯಾಣಕ್ಕಾಗಿ ಬಂಡವಾಳ == ಜನರ ಹಣ ಜನಕಲ್ಯಾಣಕ್ಕಾಗಿ ಎಂಬ ತತ್ವದೊಂದಿಗೆ ದೇಶ ನಿರ್ಮಾಣ ಯೋಜನೆಗಳಿಗಾಗಿ ಬಂಡವಾಳ ಕ್ರೋಡೀಕರಿಸುವಲ್ಲಿ ಎಲ್ಐಸಿಯ ಕೊಡುಗೆಯೂ ಅಪಾರವಾಗಿದೆ. ದೇಶದ ಪಂಚವಾರ್ಷಿಕ ಯೋಜನೆಗಳಲ್ಲೂ ಎಲ್ಐಸಿ ಅಗಾಧವಾದ ಮೊತ್ತ ತೊಡಗಿಸಿದೆ. 1956ರಿಂದ 1961ರ ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೇವಲ ರೂ.184 ಕೋಟಿ ಹಣ ಹೂಡಿದ್ದ ಎಲ್ಐಸಿಯು 12ನೆಯ ಪಂಚವಾರ್ಷಿಕ ಯೋಜನೆಯಲ್ಲಿ ತೊಡಗಿಸಿರುವ ಮೊತ್ತ ರೂ.10,86,720 ಕೋಟಿಗಳು. ದೇಶ ನಿರ್ಮಾಣದಲ್ಲಿ ಎಲ್ಐಸಿಯ ಪಾತ್ರದ ಮಹತ್ವವೇನು ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. == ವಿವಿಧ ಯೋಜನೆಗಳು == ಎಲ್ಐಸಿಯು ವಿವಿಧ ಜನ ವಿಭಾಗಗಳ ಅಗತ್ಯಕ್ಕನುಸಾರವಾಗಿ ಹಲವು ವಿಮಾ ಯೋಜನೆಗಳು ಮಕ್ಕಳಿಗಾಗಿ, ನಿವೃತ್ತಿ ವೇತನ ಮತ್ತು ಆರೋಗ್ಯ ಯೋಜನೆಗಳನ್ನೊಳಗೊಂಡಿದೆ. ಸಮಾಜದ ತೀರಾ ಕೆಳಸ್ತರದ ಬಡತನದ ರೇಖೆಯಡಿ ಬದುಕುವವರಿಗಾಗಿ ಸೂಕ್ಷ್ಮ ವಿಮಾ ಯೋಜನೆ, ( ) ಪ್ರಧಾನ ಮಂತ್ರಿ ಜನಧನ ಯೋಜನೆ, ಜೀವನ ಜ್ಯೋತಿ ಬೀಮಾ ಯೋಜನೆ, ಆಮ್ ಆದ್ಮಿ ಬೀಮಾ ಯೋಜನೆಗಳನ್ನು ನಿರ್ವಹಿಸುವ ಮೂಲಕ ತನ್ನ ಸಾಮಾಜಿಕ ಬದ್ಧತೆ ತೋರುತ್ತಿದೆ. ಎಲ್‌ಐಸಿ ತನ್ನ ಸ್ವರ್ಣ ಮಹೋತ್ಸವ ನಿಧಿಯನ್ನು ಬಳಸಿ ರೂ.77.19 ಕೋಟಿ ರೂಪಾಯಿ ವೆಚ್ಚದ ಶಾಲೆ, ಗ್ರಂಥಾಲಯ, ವೃದ್ಧಾಶ್ರಮ, ಆಸ್ಪತ್ರೆಗಳಂತಹ 356 ಯೋಜನೆಗಳನ್ನು ನಿರ್ಮಿಸಿದೆ. ಚೆನ್ನೈನಲ್ಲಿ ಇತ್ತೀಚಿಗೆ ಪ್ರವಾಹವುಂಟಾದಾಗ ಸಂತ್ರಸ್ತರಿಗೆ ಅಗಾಧ ಪ್ರಮಾಣದಲ್ಲಿ ನೆರವು ನೀಡಿದೆ. 285 ಹಳ್ಳಿಗಳನ್ನು ಬೀಮಾ ಗ್ರಾಮವೆಂದು ಗುರುತಿಸಿ ಹಲವಾರು ಸೌಲಭ್ಯಗಳನ್ನು ನೀಡಿದೆ. ಎಲ್ಐಸಿ ತನ್ನ ವಿಮಾ ವ್ಯವಹಾರವನ್ನು ಸಾಗರದಾಚೆಗೂ ವಿಸ್ತರಿಸಿದೆ. ಫಿಜಿ, ಮಾರಿಷಸ್‌ ಮತ್ತು ಬ್ರಿಟನ್‌ಗಳಲ್ಲಿಯೂ ತನ್ನ ಶಾಖೆಗಳನ್ನು ಹೊಂದಿದೆ. ಸಿಂಗಪುರ, ಬಹರೇನ್, ಶ್ರೀಲಂಕಾ, ಕೀನ್ಯಾ, ಸೌದಿ ಅರೇಬಿಯ ಮತ್ತು ಬಾಂಗ್ಲಾ ದೇಶಗಳಿಗೂ ತನ್ನ ವ್ಯವಹಾರ ವಿಸ್ತರಿಸಿದೆ. == ಸೇವಾ ಕೇಂದ್ರಗಳು == 8 ವಲಯ ಕಚೇರಿಗಳು, 113 ವಿಭಾಗೀಯ ಕಚೇರಿಗಳು, 2048 ಶಾಖೆಗಳು, 1240 ಕಿರಿ ಕಚೇರಿಗಳು ( ) 1401 ಉಪ ಕಚೇರಿಗಳನ್ನು ಹೊಂದಿರುವ ಎಲ್ಐಸಿಯಡಿಯಲ್ಲಿ 1.41 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 10,61,580 ಪ್ರತಿನಿಧಿಗಳಿದ್ದಾರೆ. ಈ ಮೂಲಕ ಎಲ್ಐಸಿಯು ದೇಶದ ಮೂಲೆ ಮೂಲೆಗೂ ಜೀವವಿಮೆಯ ಸಂದೇಶವನ್ನು ತಲುಪಿಸಿ ಬಹು ದೊಡ್ಡ ಸೇವೆ ಸಲ್ಲಿಸುತ್ತಿದೆ. == ಭಾರತದಲ್ಲಿ ವಿಶ್ವ ಬಂಡವಾಳಕ್ಕೆ ಅವಕಾಶ == 90ರ ದಶಕದಲ್ಲಿ ಆರ್ಥಿಕ ಸುಧಾರಣೆಯ ಹೆಸರಿನ ಬಹು ದೊಡ್ಡ ಅಲೆಯೆದ್ದಾಗ ಅದು ರಾಷ್ಟ್ರೀಕೃತ ವಿಮಾ ಉದ್ದಿಮೆಯನ್ನೂ ತಟ್ಟಿತು. ವಿಮಾ ಉದ್ದಿಮೆಯಲ್ಲಿ ಸುಧಾರಣೆ ತರಲು ಸರ್ಕಾರವು ಆರ್.ಎನ್. ಮಲ್ಹೋತ್ರಾ ಅವರ ನೇತೃತ್ವದಲ್ಲಿ 1993ರಲ್ಲಿ ಸಮಿತಿಯನ್ನು ರಚಿಸಿತು. ಮಲ್ಹೋತ್ರಾ ಸಮಿತಿ ಕೂಡ ಎಲ್ಐಸಿಯ ಸಾಧನೆಯನ್ನು ಗುರುತಿಸಿತು. ಆದರೂ ವಿಮಾ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡುವ ಶಿಫಾರಸ್ಸು ನೀಡಿತ್ತು. ಈ ಶಿಫಾರಸ್ಸಿನ ಆಧಾರದಲ್ಲಿ 1999ರಲ್ಲಿ ಸರ್ಕಾರವು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಸ್ವೀಕರಿಸಿತು. ಇದರಿಂದಾಗಿ 43 ವರ್ಷಗಳಿಂದ ಎಲ್ಐಸಿಗೆ ಇದ್ದ ಏಕಸ್ವಾಮ್ಯ ಕೊನೆಗೊಂಡು ಖಾಸಗಿ ವಿಮಾ ಸಂಸ್ಥೆಗಳೊಂದಿಗೆ ಸ್ಪರ್ಧಿಸುವಂತಾಯ್ತು. ನಂತರ ವಿಮಾ ರಂಗದಲ್ಲಿ ಶೇ 49ರ ವರೆಗೆ ವಿದೇಶಿ ನೇರ ಹೂಡಿಕೆಗಳಿಗೂ ಅವಕಾಶ ನೀಡಲಾಗಿದೆ. ಇದು 1956ರಲ್ಲಿ ಜೀವ ವಿಮೆಯ ರಾಷ್ಟ್ರೀಕರಣದ ಪ್ರಕ್ರಿಯೆಯನ್ನು ತಿರುಗು ಮುರುಗುಗೊಳಿಸಿದ ಬೆಳವಣಿಗೆಯಾಗಿತ್ತು. ಎಲ್ಐಸಿ ಸ್ಥಾಪಿಸುವಾಗ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರು, ‘ಸಮಾನತೆಯ ಸಮಾಜದತ್ತ ಭಾರತದ ಮುನ್ನಡೆಯಲ್ಲೊಂದು ಮಹತ್ವದ ಹೆಜ್ಜೆ’ ಎಂದಿದ್ದರು. ವ್ಯಕ್ತಿಗಳ ಮತ್ತು ಪ್ರಭುತ್ವದ ಸೇವೆ ಇದರ ಉದ್ದೇಶವಾಗುತ್ತದೆ. ಲಾಭದ ಗುರಿ ಹೊರಹೋಗುತ್ತದೆ, ಸೇವೆಯ ಗುರಿ ಮುಖ್ಯವಾಗುತ್ತದೆ ಎಂದಿದ್ದರು. ಲಾಭದ ಗುರಿ ಹೊರಹೋಗುತ್ತದೆ, ಸೇವೆಯ ಗುರಿಯೇ ಮುಖ್ಯವಾಗುತ್ತದೆ ಎಂದರೆ ಅದು ಅದಕ್ಷವೇನೂ ಆಗಬೇಕಿಲ್ಲ ಎಂಬುದನ್ನು ಒಂದು ಯಶಸ್ವೀ ಸರ್ಕಾರಿ ವಲಯದ ಉದ್ಯಮವಾಗಿ ಎಲ್ಐಸಿಯ ಸಾಧನೆ ಆಗಲೇ ತೋರಿಸಿಕೊಟ್ಟಿತ್ತು. ಸಹಜವಾಗಿಯೇ ರಾಷ್ಟ್ರೀಕರಣಕ್ಕಾಗಿ ಹೋರಾಡಿದ್ದ ಅಖಿಲಭಾರತ ವಿಮಾ ನೌಕರರ ಸಂಘ ಸಾಮಾಜಿಕ ಬದ್ಧತೆಯ ಗುರಿಯನ್ನು ಈಡೇರಿಸುತ್ತಲೇ ಒಂದು ಯಶಸ್ವೀ ಉದ್ಯಮವಾಗಿ ಬೆಳೆದಿರುವ ಎಲ್ಐಸಿ ಯನ್ನು ಸರ್ಕಾರಿ ರಂಗದಲ್ಲಿ ಉಳಿಸಿಕೊಳ್ಳಲು ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದು ಇದುವರೆಗೆ ಯಶಸ್ವಿಯಾಗಿದೆ. == ವಿಶ್ವದ ಮೊದಲ ಸ್ಥಾನ == ಎಲ್ಐಸಿ ಕೂಡ ಇದನ್ನು ಸವಾಲಾಗಿ ತೆಗೆದುಕೊಂಡು, ದೇಶಿ-ವಿದೇಶಿ ಖಾಸಗಿ ಕಂಪನಿಗಳಿಂದ ಸ್ಪರ್ಧೆಯನ್ನು ಯಶಸ್ವಿಯಾಗಿ ಎದುರಿಸಿಕೊಂಡು ಮಾರುಕಟ್ಟೆಯ ನಾಯಕನಾಗಿ ಮುಂದುವರೆದಿದೆ, ವಿಶ್ವದ 500 ಫಾರ್ಚೂನ್‌ ಕಂಪನಿಗಳಲ್ಲಿ ( ) ಒಂದು ಎಂದು ಮಾನ್ಯತೆ ಗಳಿಸಿದೆ. ವಿಶ್ವದ ಅಗ್ರಶ್ರೇಣಿಯ ಆರು ಜೀವವಿಮಾ ಸಂಸ್ಥೆಗಳಲ್ಲಿ ಎಲ್ಐಸಿಗೆ ಸ್ಥಾನವಿದೆ. ಅತ್ಯಂತ ಹೆಚ್ಚು ವಿಮೆ ವ್ಯವಹಾರ ನಡೆಸುವ ಪ್ರತಿನಿಧಿಗಳಿಗೆ ನೀಡುವ ಗೌರವವಾದ ( - ) ಪ್ರತಿನಿಧಿಗಳ ಸಂಖ್ಯೆಯಲ್ಲಿ ಎಲ್ಐಸಿ ವಿಶ್ವದ ಮೊದಲ ಸ್ಥಾನದಲ್ಲಿದೆ. ಸ್ಪರ್ಧೆಯ ವಾತಾವರಣದಲ್ಲೂ ಎಲ್ಐಸಿ ಇಂತಹ ಸಾಧನೆ ಮಾಡಿರುವುದು ಅದು ಗಳಿಸಿರುವ ಜನತೆಯ ವಿಶ್ವಾಸಕ್ಕೆ ದ್ಯೋತಕ. ಎಲ್ಐಸಿಯನ್ನು ‘ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್’ ಎನ್ನುವ ವಿಶ್ವಾಸಕ್ಕೆ ಪಾತ್ರವಾಗಿದೆ. == ದೇಶದ ಅಭಿವೃದ್ಧಿಗೆ ಜನರ ಕೊಡಿಗೆ == ಎಲ್ಐಸಿಯ ಈ ಸಾಧನೆಯ ಹಿಂದೆ ಸಂಸ್ಥೆಯ ಪ್ರತಿನಿಧಿ ಮತ್ತು ನೌಕರರ ಕೊಡುಗೆ ದೊಡ್ಡದಿದೆ. ಆದರೆ ಅದಕ್ಕಿಂತ ದೊಡ್ಡದು ಈ ದೇಶದ ಜನತೆ ಎಲ್ಐಸಿಯ ಮೇಲಿಟ್ಟಿರುವ ವಿಶ್ವಾಸ. ಎಲ್ಐಸಿಯಿಂದ ವಿಮಾ ಪಾಲಿಸಿ ಕೊಂಡರೆ ಅದು ಕೇವಲ ವೈಯಕ್ತಿಕ ಆಯ್ಕೆ ಮಾತ್ರವಲ್ಲ. ಈ ದೇಶದ ನಿರ್ಮಾಣಕ್ಕೆ ಕೊಡುವ ಕೊಡುಗೆಯೂ ಹೌದು. == ಬಂಡವಾಳ ಹೂಡಿಕೆ == 2016 ರ ಮಾರ್ಚಿ ಅಂತ್ಯಕ್ಕೆ ಎಲೈಸಿ ತೊಡಗಿಸಿರುವ ಮೊತ್ತ. == ಉಲ್ಲೇಖ ==